Friday 1 May 2009

ದೇವರನ್ನು ಕುರಿತು...

ಸರ್ವಜ್ಞನ ಬಹುತೇಕ ವಚನಗಳು ದೇವರ ಬಗ್ಗೆ, ಗುರುಗಳ ಬಗ್ಗೆ ಹಾಗು ನಮಗೆ ಸ್ವಲ್ಪ ಬುದ್ಧಿವಾದ ಸಾರುವ ವಿಷಯಗಳನ್ನು ಒಳಗೊಂಡಿದೆ. ಮೊದಲಿಗೆ ದೇವರನ್ನು ಕುರಿತಾದ ಕೆಲವು ವಚನಗಳನ್ನು ನೋಡೋಣ.

ಸಣ್ಣನೆಯ ಮಳಲೊಳಗೆ | ನುಣ್ಣನೆಯ ಶಿಲೆಯೊಳಗೆ|
ಬಣ್ಣಿಸಿ ಬರೆದ ಪಟದೊಳಗೆಯಿರುವಾತ|
ತನ್ನೊಳಗೆ ಇರನೇ ಸರ್ವಜ್ಞ||

- ಮರಳಿನ ಕಣದಲ್ಲಿಯೂ, ದೊಡ್ಡ ಶಿಲೆಯಲ್ಲಿಯೂ, ಮನೆಯಲ್ಲಿರುವ ಚಿತ್ರಪಟದಲ್ಲಿಯೂ ದೇವರು ಇದ್ದಾನೆಂದ ಮೇಲೆ, ನಮ್ಮ ದೇಹದಲ್ಲಿ ಅವನು ಇರೋದಿಲ್ಲವೇ? ಅಂತ ಸರ್ವಜ್ಞ ಕೇಳುತ್ತಿದ್ದಾನೆ.

ವಾರಣಾಸಿಗೆ ಹೋಗುವ| ಕಾರಣವೇನಯ್ಯಾ|
ಕಾರಣ ಪುರುಷನೊಳಗಿರಲು ಅಲಿವುದಕೆ|
ಕಾರಣ ಹೇಳು ಸರ್ವಜ್ಞ||

- ಕಾರಣ ಪುರುಷ ಅಂದರೆ ಆ ಪರಮಾತ್ಮನು ನಮ್ಮೊಳಗೇ ಇರುವಾಗ, ನಾವು ಅವನ ದರ್ಶನಕ್ಕೆ ಕಾಶಿಗೆ ಹೋಗುವೆ ಕಾರಣವಾದರೂ ಏನಿದೆ? ಅಂದರೆ ದೇವರು ನಮ್ಮೊಳಗೆ ಇದ್ದಾನೆ. ಅಂದ ಮೇಲೆ ದೇವಸ್ಥಾನಗಳಿಗೆ ಹೋಗುವ ಕಾರಣವೇನಿದೆ ಎಂಬುದು ಅವರ ಪ್ರಶ್ನೆ.

ಇದೇ ಅರ್ಥ ಬರುವ ಮತ್ತೊಂದು ವಚನ:

ಮನದಲ್ಲಿ ನೆನೆವಂಗೆ| ಮನೆಯೇನು ಮಠವೇನು?
ಮನದಲ್ಲಿ ನೆನೆಯದಿರುವವನು|ದೇಗುಲದ
ಕೊನೆಯಲ್ಲಿದ್ದೇನು ಸರ್ವಜ್ಞ||

- ದೇವರನ್ನು ಧ್ಯನಮಾಡಬೇಕಾದರೆ ನಾವು ಗುಡಿಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲೂ ನೆನೆಯಬಹುದು. ದೇವರನ್ನು ಮನಸ್ಸಿನಿಂದ ಧ್ಯಾನಿಸದೇ ಇರುವವನು ದೇಗುಲದಲ್ಲಿದ್ದೇನು ಪ್ರಯೋಜನ? ಒಟ್ಟಾರೆ ದೇವರನ್ನು ಧ್ಯಾನಿಸ ಬೇಕಾದರೆ ನಮಗೆ ಬೇಕಿರೋದು ದೇಗುಲವಲ್ಲ, ಮಠವಲ್ಲ. ನಮ್ಮ ಮನಸ್ಸು ಅಷ್ಟೆ.

4 comments:

sunaath said...

ಒಳ್ಳೆಯ ಆರಂಭ.
Keep it up.

shivu.k said...

ಜಯಶಂಕರ್,

ದೇವರನ್ನು ಧ್ಯಾನಿಸ ಬೇಕಾದರೆ ನಮಗೆ ಬೇಕಿರೋದು ದೇಗುಲವಲ್ಲ, ಮಠವಲ್ಲ. ನಮ್ಮ ಮನಸ್ಸು ಅಷ್ಟೆ.

ಈ ಮಾತು ಸತ್ಯ ಸತ್ಯ....ಮುಂದುವರಿಸಿ...

ಧನ್ಯವಾದಗಳು..

ಧರಿತ್ರಿ said...

ಇದನ್ನೇ ಜಿಎಸ್ ಎಸ್ ಹೇಳಿರೋದು,
"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ..
ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ"!

ಮುಂದುವರೆಯಲಿ...ವಚನಾಮೃತ ಸವಿ..
-ಧರಿತ್ರಿ

Prakash Srinivas said...

nan search madtha idhe ,, thnks 4 posting