Wednesday 22 April 2009

ಸರ್ವಜ್ಞನೆಂಬುವನು....

ಪುಷ್ಪದತ್ತನನ್ನು ಮನೆಯಿಂದ ಹೊರಕ್ಕೆ ಹಾಕಿದ ಮೇಲೆ, ಅವನು ಅನೇಕ ಗುರುಗಳಿಂದ ವಿದ್ಯಾಭ್ಯಾಸ ಮಾಡಿ ಅಪಾರವಾದ ಜ್ಞಾನವನ್ನು ಸಂಪಾದಿಸುತ್ತಾನೆ. ಆ ಗುರುಗಳಿಂದ ತಿಳಿದದ್ದನ್ನು ಸಮಾನ್ಯ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾನೆ.
ನಂತರ ಸರ್ವಜ್ಞನೆಂಬ ಅಂಕಿತದಿಂದ ಅನೇಕ ವಚನಗಳನ್ನು ತ್ರಿಪದಿ ರೂಪದಲ್ಲಿ ಬರೆಯುತ್ತಾನೆ.

ಈ ವಚನಗಳನ್ನು ಗಮನಿಸಿ:

ಸರ್ವಜ್ಞನೆಂಬುವನು ಗರ್ವದಿಂದಾದವನೆ?|
ಸರ್ವರೊಳಗೊಂದು ನುಡುಗಲಿತು ವಿದ್ಯೆಯ|
ಪರ್ವತವೇ ಆದ ಸರ್ವಜ್ಞ||

- ನಾನು ವಿದ್ಯೆಯ ಗರ್ವದಿಂದ ಸರ್ವಜ್ಞನೆಂದು ಹೇಳಿಕೊಳ್ಳುತ್ತಿಲ್ಲ. ನಾನು ಎಲ್ಲಾ ವಿದ್ವಾಂಸರ ಹತ್ತಿರ ಒಂದೊಂದು ಮಾತನ್ನು ಕಲಿತು ( ಬಹಳಷ್ಟು ಮಂದಿಯಿಂದ ವಿದ್ಯಾಭ್ಯಾಸ ಮಾಡಿಕೊಂಡು) ವಿದ್ಯೆಯ ಪರ್ವತವೇ ಆದೆನು. ಅಂದರೆ ಈತನಿಗಿಂತ ತಿಳಿದವರು ಎಷ್ಟೋ ಜನರಿದ್ದಾರೆ.

ಹೇಳಲರಿಯನು ನಾನು ಹೇಳೆನಲು ಹೇಳಿದೆನು|
ಬಾಳಲೋಚನನ ಶರಣರಾಳಾಗಿ|
ಹೇಳಿದೆನು ನೋಡು ಸರ್ವಜ್ಞ||

- ನನಗೆ ವಚನಗಳನ್ನು ಹೇಳಲು ತಿಳಿದಿಲ್ಲ. ಆದರೆ ಜನರೆಲ್ಲಾ ಬಲವಂತವಾಗಿ ಹೇಳು ಎಂದಿದ್ದರಿಂದ ಶಿವನ ದಾಸಾನುದಾಸನಾಗಿ ನನಗೆ ತಿಳಿದಿದ್ದನ್ನು ಹೇಳಿದೆನು.

Monday 13 April 2009

ಸರ್ವಜ್ಞನ ಕಾಲದ ಬಗ್ಗೆ

ಸರ್ವಜ್ಞನ ಕಾಲದ ಬಗ್ಗೆ ಈಗಿರುವ ಮಾಹಿತಿಗಳ ಪ್ರಕಾರ ಕ್ರಿ.ಶ ೧೬ನೇ ಶತಮಾನ ಅಥವ ೧೭ನೇ ಶತಮಾನದಲ್ಲಿದ್ದ. ಈತನ ಊರು ಧಾರವಾಡ. ಎರಡು ಪುಸ್ತಕಗಳಲ್ಲೂ ಸರಿಯಾದ ಮಾಹಿತಿ ಸಿಗದ ಕಾರಣ, ನಾನು ಅವನ ಕಾಲದ ಬಗ್ಗೆ ಮಾಹಿತಿ ಸಂಗ್ರಹಿಸಲು ಅಂತರ್ಜಾಲದಲ್ಲಿ ಕೆಲವು ದಿನಗಳನ್ನು ಕಳೆದೆ. ಹಾಗು ನನಗೆ ಸಿಕ್ಕ ಮಾಹಿತಿಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.

ಈಗಿರುವ ಅಂಶವನ್ನು ಈಗ ನಂಬೋಣ. ಹಾಗಾದರೆ ನನಗೊಂದು ಸಂದೇಹವಿದೆ. ೧೬ನೇ ಶತಮಾನದಲ್ಲಿ ಕರ್ನಾಟದಲ್ಲಿ ಆಳಿದ ರಾಜರ ಮಾಹಿತಿಗಳು ನಿಖರವಾಗಿದೆ, ಆಗಿದ್ದ ಈಸ್ಟ್ ಇಂಡಿಯಾ ಕಂಪನಿಯ ಬಗ್ಗೆ ಎಲ್ಲಾ ಗೊತ್ತಿದೆ. ಅದೇ ಕಾಲದಲ್ಲಿದ್ದ ಸರ್ವಜ್ಞನ ಬಗ್ಗೆ ಮಾಹಿತಿವಿಲ್ಲ ಎಂದರೇನರ್ಥ?

ಈತನ ಕಾಲದ ಬಗ್ಗೆ ತಿಳಿದು ಕೊಳ್ಳುವ ಆಸಕ್ತಿಯಿಂದ ನಾನು ಪುಟಗಳನ್ನು ತಿರುವುಹಾಕಿದಾಗ ತಿಳಿದ ವಿಷಯಗಳು

೧. ಜೈನ ಧರ್ಮದ ಬಗ್ಗೆ ಹಾಗು ತೀರ್ಥಂಕರರ (ಜಿನ) ಬಗ್ಗೆ ವಚನಗಳು
೨. ಲಿಂಗಾಯತರ ಬಗ್ಗೆ ವಚನಗಳು
೩. ಸಂಗೀತದ ಒಂದು ರಾಗದ ಬಗ್ಗೆ

೧) ಜೈನರ ಬಗ್ಗೆ ನೋಡೋಣ:-

ಉಪ್ಪು ಸಪ್ಪನೆಯಕ್ಕು | ಕಪ್ಪುರವು ಕರಿದಿಕ್ಕು|
ಸರ್ಪನಿಗೆ ಬಾಲವೆರಡಕ್ಕು ಸವಣ ತಾ|
ತಪ್ಪಾಡಿದಂದು ಸರ್ವಜ್ಞ||

-- ಸವಣರು ಸುಳ್ಳನ್ನಾಡಿದರೆ ಉಪ್ಪು ಸಪ್ಪೆಯಾಗುತ್ತದೆ, ಕರ್ಪೂರ ಕಪ್ಪಾಗುತ್ತದೆ ಹಾಗು ಹಾವಿಗೆ ಎರಡು ಬಾಲ ಬರುತ್ತದೆ.

ನಾನು ನಿಘಂಟು ತಾತನನ್ನು ಕೇಳಿದೆ ಸವಣ ಎಂದರೆ ಏನು ಅಂತ. ಆಗ ಅವರು,
ಸವಣ = (ಸಂ. ಶ್ರಮಣ) (ನಾ) ಜೈನ ಸನ್ಯಾಸಿ, ಕ್ಷಪಣಕ ೨ ಕಿವಿ

ನನಗನಿಸಿದ್ದು, ಸರ್ವಜ್ಞ ಈ ರೀತಿಯಾಗಿ ಹೇಳಿದ್ದಾನೆಂದ ಮೇಲೆ, ಆಗ ಸವಣರು ಬದುಕಿರ ಬೇಕು ಹಾಗು ಈತನಿಗೆ ಅವರ ಬಗ್ಗೆ ತಿಳಿದಿರ ಬೇಕು. ಹತ್ತಿರದಿಂದ ಅವರನ್ನು ಕಂಡಿರಲೇ ಬೇಕು.

ಜೈನರು ಕರ್ನಾಟದಲ್ಲೂ ಇದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಶ್ರವಣಬೆಳಗೊಳದಲ್ಲಿ ಗೋಮಟೇಶ್ವರ ಇರೋದೇ ಸಾಕ್ಷಿ. ನನ್ನ ಅನಿಸಿಕೆ ಏನೆಂದರೆ, ಸವಣಕ್ಕೆ ಸಂಸ್ಕೃತ ಪದ "ಶ್ರಮಣ" -> ಇದು ಕನ್ನಡಕ್ಕೆ ಬರುವಾಗ "ಶ್ರವಣ"ವಾಗಿರಬಹುದು. ಬೆಳಗೊಳ ಪದವು ಬಿಳಿ + ಕೊಳ ದಿಂದ ಬಂದಿದೆ. ಶ್ರವಣರಿದ್ದ ಬಿಳಿ ಕೊಳವಿದ್ದ ಊರೇ ಶ್ರವಣಬೆಳಗೊಳ.

ಈ ವಚನ ಗಮನಿಸಿ:

ಮೊಸರು ಇಲ್ಲದ ಊಟ| ಪಸರವಿಲ್ಲದ ಕಟಕ|
ಹಸನವಿಲ್ಲದಳ ರತಿಕೂಟ ಜಿನನ ಬಾಯ್|
ಕಿಸುಕುಳದಂತೆ ಸರ್ವಜ್ಞ||

ಮತ್ತೆ ನಿಘಂಟು ತಾತನನ್ನು ಕೇಳಿದೆ,
ಜಿನ: (ಸಂ) (ನಾ) ೧ ಇಂದ್ರಿಯಗಳನ್ನು ಗೆದ್ದವನು, ಜಿತೇಂದ್ರಿಯ ೨ ಜೈನ ಯಾ ಬೌದ್ಧ ಸನ್ಯಾಸಿ ೩ ಬುದ್ಧ ೪ ವಿಷ್ಣು ೫ ಅರ್ಹಂತ ೬ ಇಪ್ಪತ್ನಾಲ್ಕು ಎಂಬ ಸಂಖ್ಯೆಯ ಸಂಕೇತ

ಜೈನ ಧರ್ಮದಲ್ಲಿ ೨೪ ಸಂಖ್ಯೆ ಏನನ್ನು ಜ್ಞಾಪಿಸುತ್ತದೆ? (೨೪ನೇ ತೀರ್ಥಂಕರ (ಜಿನ)) ಅಂದರೆ ಮಹಾವೀರ. ಮಹಾವೀರನ ಕಾಲ ಕ್ರಿ. ಪೂ. ೬ನೇ ಶತಮಾನ. ಇಲ್ಲಿ ಸರ್ವಜ್ಞ ನೇರವಾಗಿ ಮಹಾವೀರನಿಗೆ ಹೇಳಿರ ಬಹುದಲ್ಲವೆ? ಹಾಗಾಗಿ ಸರ್ವಜ್ಞ ಕ್ರಿ.ಪೂ. ೬ನೇ ಶತಮಾನದವನು ಎನ್ನ ಬಹುದಲ್ಲವೆ?

೨) ಈಗ ಲಿಂಗಾಯತರ ವಿಷಯ ನೋಡೋಣ:-

ಲಿಂಗಾಯತ ಧರ್ಮ ಕೂಡ ಹಳೆಯದೆ. ಇದನ್ನು ಹೆಚ್ಚು ಪ್ರಚಾರ ಮಾಡಿದವರು ಬಸವಣ್ಣ ಹಾಗು ಅವರ ಕಾಲದಲ್ಲಿದ್ದ ಅಲ್ಲಮ ಪ್ರಭು, ಅಕ್ಕಮಹಾದೇವಿ. ಇವರ ಕಾಲ ೧೨ನೇ ಶತಮಾನ. ಈ ಧರ್ಮ ೧೨ನೇ ಶತಮಾನಕ್ಕಿಂತ ಹಿಂದಿನದು. ಇದಕ್ಕೆ ಎರಡು ಸಾಕ್ಷಿಗಳನ್ನು ನೋಡೋಣ.
೧. ಲಿಂಗಾಯತರ ಧರ್ಮ ಗ್ರಂಥ "ಸಿದ್ಧಾಂತ ಶಿಖಾಮಣಿ" ರಚಿತವಾಗಿರೋ ಕಾಲ - ೮ನೇ ಶತಮಾನ
೨. ಲಿಂಗಾಯತರ ಮಠ- ಜಂಗಮವಾದಿ ಮಠವು ಕಾಶಿಯಲ್ಲಿದ್ದು ೬ನೇ ಶತಮಾನದ್ದು ಎಂಬ ದಾಖಲೆ ಇದೆ.
ಇದರಿಂದ ಸರ್ವಜ್ಞನು ಆ ಕಾಲದಲ್ಲೇ ಇದ್ದಿರಬಹುದು ಎಂದು ಹೇಳ ಬಹುದಲ್ಲವೆ?

೩) ಸಂಗೀತದ ರಾಗದ ಕುರಿತಾಗಿ:-

ನಾಟ ರಾಗವು ಲೇಸು| ತೋಟ ಮಲ್ಲಿಗೆ ಲೇಸು|
ಕೂಟವದು ಲೇಸು ಹಿರಿಯರೊಳು ಶಿವನ ಅರಿ|
ದಾಟವೇ ಲೇಸು ಸರ್ವಜ್ಞ||

(ನಾನು refer ಮಾಡುತ್ತಿದ್ದ ಎರಡೂ ಪುಸ್ತಕಗಳಲ್ಲಿ "ನಾಟ ರಾಗ"ದ ವಿಷಯವೇ ಬರೆದಿಲ್ಲ.)

ನಮ್ಮ ಪುರಂದರದಾಸರನ್ನು "ಸಂಗೀತದ ಪಿತಾಮಹ" ಅಂತ ಕರೆಯುವುದು ಬಹುಶಃ ಎಲ್ಲರಿಗೂ ತಿಳಿದಿರುತ್ತದೆ. ಅವರ ಕಾಲ ೧೫ನೇ ಶತಮಾನ. ಹೀಗಿದ್ದರೂ ಸರ್ವಜ್ಞನ ಕಾಲ ೧೫ನೇ ಶತಮಾನ ಎನ್ನಲಾಗುವುದಿಲ್ಲ. ಏಕೆಂದರೆ ಸಂಗೀತದ ಕುರಿತಾದ ಮಾಹಿತಿಗಳು ನಮ್ಮ ಸಾಮವೇದದಲ್ಲೇ ಇತ್ತು.( ಐದು ಸಾವಿರ ವರ್ಷಗಳ ಹಿಂದೆ). ಪುರಂದರ ದಾಸರು ಸಂಗೀತವನ್ನು ಕಲಿಯಲು ಸುಲಭವಾಗಲೆಂದ "Syllabus" ಮಾಡಿದ್ದಾರೆ. ಪುರಂದರ ದಾಸರು ಇದನ್ನು ಕಂಡು ಹಿಡಿದಿಲ್ಲ.
LKG -> ಸ....ಪಾ..........ಪಾ....ಸ...........
UKG -> ಸರಳವರಸೆ,
1st Std -> ತಾರ ಸ್ಥಾಯಿ ಹಾಗು ಮಂದ್ರ ಸ್ಥಾಯಿ
2nd Std -> ಜಂಟಿವರಸೆ ಇತ್ಯಾದಿಗಳು.

ತ್ಯಾಗರಾಜರು ತಮ್ಮ ಪಂಚರತ್ನ ಕೀರ್ತನೆಗಳಲ್ಲಿ ಮೊದಲನೆಯದನ್ನು ನಾಟ ರಾಗದಲ್ಲೇ ಮಾಡಿರುವುದು ಸತ್ಯ. ಅಲ್ಲದೆ ನಾಟ ರಾಗವು ಸಾವಿರ ವರ್ಷಕ್ಕೂ ಹಳೆಯ ರಾಗ ಎನ್ನುವುದಕ್ಕೆ ಮಾಹಿತಿಯಿದೆ. ಸರ್ವಜ್ಞನಿಗೆ ಅಂದಿನವರು ಯಾರೋ ನಾಟ ರಾಗದ ಬಗ್ಗೆ ಹೇಳಿ ಅದನ್ನು ವಚನದಲ್ಲಿ ಬರೆದಿರಬಹುದು. ನಾಟ ರಾಗವು ಶ್ರೇಷ್ಠವಾದ ರಾಗವಾದ್ದರಿಂದ ತ್ಯಾಗರಾಜರು ಆ ರಾಗದಲ್ಲಿ ಕೀರ್ತನೆ ಮಾಡಿದ್ದಾರೆ ಎನ್ನ ಬಹುದು.

ಎಂ.ಎಸ್.ಸುಬ್ಬಲಕ್ಷ್ಮಿಯವರು ಹಾಡಿರುವ ಹಾಡು ಇಲ್ಲಿ ಕೇಳಬಹುದು:



ಇಷ್ಟೆಲ್ಲಾ ಸಂಶೋಧನೆ ಮಾಡಿದರೂ ನಿಖರವಾದ ಮಾಹಿತಿ ನನಗೆ ಸಿಕ್ಕಿಲ್ಲ. ಈಗ ನಿಮ್ಮ ಮುಂದೆ ಇಡುತ್ತಿದ್ದೇನೆ. ಚರ್ಚೆಗೆ ಆಹ್ವಾನಿಸುತ್ತಿದ್ದೇನೆ.

--
ಈ ಪೋಸ್ಟ್ ಬರೆದ ಮೇಲೆ, ಶ್ರೀ ಸವಿತೃ ಅವರು, ಒಂದು ವಚನವನ್ನು ಕಾಮೆಂಟ್ ಮಾಡಿದರು. ಅವರು ಕೊಟ್ಟ ಮಾಹಿತಿ ಕಾಮೆಂಟಿನಲ್ಲೂ ಇದೆ. ಇಲ್ಲೂ ಹಾಕುತ್ತೇನೆ.
ಸರ್ವಜ್ಞನು ಬಸವಾದಿ ಶರಣರ ನಂತರದ ಕಾಲದವನು ಅಂತ ತಜ್ಞರ ಅನಿಸಿಕೆ.

೧.ಆತ ಕೆಲವು ಕಡೆ ಶರಣರ ಹೆಸರನ್ನು refer ಮಾಡಿದ್ದಾನೆ.

ಉದಾ.

ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು|
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ
ಹಸಿದು ಹೋದಂತೆ ಸರ್ವಜ್ಞ

೨. ಶರಣ ಪದ ಸಿದ್ದಾಂತ ಶಿಖಮಣಿಯಲ್ಲಿ / ಶೈವಾಗಮಗಳಲ್ಲಿ ಬಂದಿದ್ದರೂ "ಶರಣರು" ಅನ್ನೋ ಕಾನ್ಸೆಪ್ಟ್ ಬಂದಿದ್ದು ಬಸವಾದಿ ಶರಣರ ನಂತರವೆ. ಅದಕ್ಕೂ ಮುಂಚಿನವರನ್ನು ಪುರಾತನರು ಅಂತ ಸಂಭೋಧಿಸುತ್ತಾರೆ.

ಈ ಮಾಹಿತಿಯಿಂದ ಆತ ಕ್ರಿ.ಪೂ ದವನು ಅನ್ನೋದು ಸುಳ್ಳು. ಬಸವಣ್ಣನ ಸಮಕಾಲೀನ ಅಥವಾ ನಂತರದವನು ಅನ್ನ ಬಹುದು.

ವಂದನೆಗಳು ಸವಿತೃಅವರೆ.

Monday 6 April 2009

ಮನೆಯಿಂದ ಹೊರಗೆ

ತಾ ಎಂದೆನಲ್ಲದೇ | ತಾಯಿನಾನೆಂಬೆನೇ |
ತಾಯಿಯೆಂದಾನು ನುಡಿದೇನು ಪರಸ್ತ್ರೀಯ|
ತಾಯಿಯೆಂದೆಂಬ ಸರ್ವಜ್ಞ||

- ಮಲ್ಲಮ್ಮನನ್ನು "ತಾ" ಎಂದು ಬೇಡುವೆನು ಹೊರತು ಅವಳನ್ನು "ನನ್ನ ತಾಯಿ" ಅಂತ ಕರಿಯೋದಿಲ್ಲ. ಜಗತ್ತಿನಲ್ಲಿಯ ಪರಸ್ತ್ರೀಯರೂ ನನಗೆ ತಾಯೆಂದಿರಾಗಬೇಕು.

ನೂಕಿ ಬಿಟ್ಟರು ಆಗ | ಕಾಕುತನದೊಳು ಬೇಗ|
ಲೋಕದೊಳಗೆಲ್ಲ ಕಂಡದ್ದು ನುಡಿದು ತಾ|
ನೇಕವಾಗಿಹನು ಸರ್ವಜ್ಞ||

- ಮೇಲೆ ಹೇಳಿದಂತ ನಿಜವಾದ ಸಂಗತಿಯನ್ನು ಹೇಳಿದ ಕಾರಣಕ್ಕೆ ನನ್ನನು ಮನೆಯಿಂದ ಹೊರಗೆ ಹಾಕಿದರು. ಆದರೂ ಲೋಕದಲ್ಲಿ ಕಂಡ ಸಂಗತಿಗಳನ್ನು ಹೇಳುತ್ತಾ ಇದ್ದೀನಿ.

ಮೀರಿ ಬೆಳೆಯಲು ತನುವು| ಆರು ಬಣ್ಣವ ನುಡಿಸಿ|
ಮೂರು ರುಚಿದೋರಿ ಮೆರೆಸಿ ತಾ ತನ್ನನ್ನೇ|
ತೋರದೇ ಹೋದ ಸರ್ವಜ್ಞ||

- ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಯಿಸುವುದು, ಬಡವನಾಗುವುದು, ಹಾಳಾಗುವುದು ಎಂಬ ಆರು ಬಗೆಯ ವಿಕಾರಗಳನ್ನು ಹೊಂದಿ, ಸತ್ವ, ರಜ ಹಾಗು ತಮ ಗುಣಗಳಿಗೆ ಒಳಗಾದ ನನ್ನ ದೇಹವು ಬೆಳವಣಿಗೆಯನ್ನು ಹೊಂದಿತು.

ಕಣ್ಣು ನಾಲಿಗೆ ಮನವ | ಪನ್ನಗಧರ ಕೊಟ್ಟ|
ಚೆನ್ನಾಗಿ ಮನವ ತೆರೆದು ತಾ ಬಿಡದೆ|
ಚನ್ನನಾ ನೆನಹು ಸರ್ವಜ್ಞ||

- ನನಗೆ ಪಂಚೇಂದ್ರಿಯಗಳನ್ನು, ಮನಸನ್ನು ಶಿವ ಕೊಟ್ಟಿದ್ದಾನೆ. ಅಂತಹ ಶಿವನನ್ನು ಮನಸ್ಸನ್ನು ಬೇರೇ ವಿಷಯಗಳ ಕಡೆಗೆ ಹರಿಯಗೊಡದೆ ಸದಾ ನೆನೆಯುತ್ತೇನೆ.

( ಈತ, ದೇವತೆಗಳಲ್ಲಿ ಶಿವನೇ ಶ್ರೇಷ್ಠನೆಂದು ಸಾರುವ ವಚನಗಳನ್ನೇ ಬರೆದಿದ್ದಾನೆ.)

Sunday 5 April 2009

ಸರ್ವಜ್ಞ ಯಾರು?

ಮುನ್ನ ಕೈಲಾಸದಲಿ | ಪನ್ನಗಧರನಾಳು
ಎನ್ನಯಾ ಪೆಸರು, ಪುಷ್ಪದತ್ತನು ಎಂದು|
ಮನ್ನಿಪರು ದಯದಿ ಸರ್ವಜ್ಞ||

ಅಂದಿನ ಪುಷದತ್ತ| ಬಂದ ವರರುಚಿಯಾಗಿ|
ಮುದವ ಸಾರೆ, ಸರ್ವಜ್ಞನೆಂದೆನಿಸಿ|
ನಿಂದವನು ನಾನೆ ಸರ್ವಜ್ಞ||

ತಂದೆ ಬಸವರಸನು| ತಾಯಿ ಮಾಳಿಯು ಅಲ್ಲ|
ಚಂದ್ರಶೇಖರನ ವರದಿಂದ ಹುಟ್ಟಿದ|
ಕಂದ ತಾನೆಂದ ಸರ್ವಜ್ಞ||
- ಬಸವರಸನು ಸರ್ವಜ್ಞನ ತಂದೆ ಹಾಗು ಮಲ್ಲಮ್ಮ ಆತನ ತಾಯಿ. ತತ್ವಶಹ ವಿಚಾರ ಮಾಡಿದರೆ ಬಸವರಸನೇ ಈಶ್ವರ, ಮಲ್ಲಮ್ಮನೇ ಪಾರ್ವತಿಯ. ಅವರಿಬ್ಬರು ಈಶ್ವರನ ಪ್ರಸಾದದಿಂದ ನನ್ನನ್ನು ಪಡೆದವರಾದ್ದರಿಂದ ನಾನು ನಿಶ್ಚಯವಾಗಿ ಈಶ್ವರನ ಕಂದ.

Saturday 4 April 2009

ವಚನಗಳನ್ನು ಆರಂಭಿಸುವ ಮುನ್ನ

ಈ ಸರ್ವಜ್ಞನ ವಚನಗಳನ್ನು ಓದುತ್ತಿರುವವನು ನಾನು. ಇದರಿಂದ ನಾವು ತಿಳಿದುಕೊಳ್ಳ ಬೇಕಾದ ವಿಷಯಗಳು ಬೇಕಾದಷ್ಟಿವೆ. ಸರ್ವಜ್ಞನ ಕೆಲವು ವಚನಗಳನ್ನು ಶಾಲೆಯಲ್ಲಿ ಓದಿದಾಗ ನನಗೆ ತುಂಬಾ ಹಿಡಿಸಿತ್ತು. ಮೂರು ಸಾಲುಗಳಲ್ಲಿ ಏನೇನೋ ಹೇಳೋ ಶಕ್ತಿ ಆತನಲ್ಲಿತ್ತು.

ಇದನ್ನು ಓದಿ, ಇದರ ಪ್ರೇರಣೆಯಿಂದ ನಾನಗಾದ ಕೆಲವು ಅನುಭವಗಳನ್ನು ವಚನಗಳ ಮಾದರಿಯಲ್ಲಿ ಬರೆಯುತ್ತಿದ್ದೀನೆ.

ಈ ವಚನಗಳನ್ನು ಓದುತ್ತಿದ್ದಾಗ ನನಗೆ ತಿಳಿದ ಮತ್ತೊಂದು ವಿಷಯ, ನಮ್ಮ ಚಲನ ಚಿತ್ರ ಸಾಹಿತಿಳಿಗೂ ವಚನ ಸಹಾಯ ಮಾಡಿದೆಯೆಂದು.

ನಮ್ಮ ಚಿ. ಉದಯಶಂಕರರು ಬರೆದಿರೋ ಹಾಡು:

ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ

ಅದರ ಚರಣದಲ್ಲೊಂದು ಕಡೆ..

"ಜಾಣೆ ನುಡಿಗಳೋ..
ವೀಣೆ ಸ್ವರಗಳೋ
ಕಾಣೆನು ಪ್ರೇಯಸಿ ನಾನು...." ಅಂತ ಬರೆದಿದ್ದಾರೆ.

ಈ ವಚನ ಗಮನಿಸಿ:
ಜಾಣೆಯಾ ನುಡಿ ಲೇಸು| ವೀಣೆಯಾ ಸ್ವರ ಲೇಸು
ಮಾಣದಲೆ ವದನ ಶುಚಿ ಲೇಸು| ಕೂರ್ಪವರ
ಕಾಣುವುದೇ ಲೇಸು ಸರ್ವಜ್ಞ

ಅಷ್ಟೇ ಅಲ್ಲ.. ಚಿ.ಉ ಸಂಸ್ಕೃತದ ಶುಭಾಷಿತವನ್ನು ...

"ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದತೂ ಗಂಧದ ಪರಿಮಳ ತುಂಬಿ ಬರುವುದು..
ತಾನೆ ಉರಿದರು ದೀಪವು ಮನೆಗೆ ಬೆಳಕ ಕೊಡುವುದು" ಅಂತ ಬರೆದಿಲ್ಲವೇ?

ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬ ಅಲ್ಲಮಪ್ರಭು ವಚನವನ್ನು - "ಮಾಮರವೆಲ್ಲೋ ಕೋಗಿಲೆ ಎಲ್ಲೋ" ಅಂತ ಬರೆದಿಲ್ಲವೇ?

ಇದು ಕೇವಲ ಒಬ್ಬ ಸಾಹಿತಿಯ ೩ ಉದಾಹರಣೆ. ಇನ್ನೆಷ್ಟು ಜನರಿಗೆ ಇದರ ಸಹಾಯವಾಗಿದೆಯೋ ಗೊತ್ತಿಲ್ಲ.


ಈ ಬ್ಲಾಗು ಶುರು ಮಾಡಲು ನನಗೆ ಸಲಹೆ ಕೊಟ್ಟ ನನ್ನ ಭಾವ ಶ್ರೀ ಗಿರೀಶ್ ಚಂದ್ರ ಅವರಿಗೆ ವಂದಿಸುತ್ತೇನೆ.